honnevani ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
honnevani ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮಾರ್ಚ್ 15, 2021

ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಿದು

      


 
ಇದು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ. ಆದರೆ, ಈ ದೇವಾಲಯ ಇರುವುದು ಭಾರತದಲ್ಲಲ್ಲ, ಬದಲಿಗೆ ಕಾಂಬೋಡಿಯಾದಲ್ಲಿ. ಅಲ್ಲದೆ, ಇದೀಗ ಇದು ಕೇವಲ ಹಿಂದೂ ದೇವಾಲಯವಾಗಿ ಮಾತ್ರ ಉಳಿದಿಲ್ಲ. ಈ ದೇವಾಲಯವನ್ನು ಬೌದ್ಧ ದೇವಾಲಯವನ್ನಾಗಿ ಪರಿವರ್ತಿಸಲಾಗಿದ್ದು, ಹಿಂದೂ ಮತ್ತು ಬೌದ್ಧ ಧರ್ಮದ ಅನುಯಾಯಿಗಳು ಈ ದೇವಾಲಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. 

        ಭಾರತದಿಂದ ಸುಮಾರು 5 ಸಾವಿರ ಕಿ.ಮೀ. ದೂರದಲ್ಲಿರುವ ದೇಶ ಕಾಂಬೋಡಿಯಾ. ಆಗ್ನೇಯ ಏಷ್ಯಾದ ಪುಟ್ಟ ರಾಷ್ಟ್ರವಿದು. ಬಹಳ ಹಿಂದೆ ಕಾಂಬೋಡಿಯಾವನ್ನು "ಕಾಂಬೋಜಾ' ಎಂದು ಕರೆಯಲಾಗುತ್ತಿತ್ತು. ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ಇರುವುದು ಇದೇ ಕಾಂಬೋಡಿಯಾದಲ್ಲಿ. ಅದುವೇ ಇಲ್ಲಿನ "ಅಂಕೂರ್ ವಾಟ್' ದೇವಾಲಯ. ಒಂದು ಕಾಲದಲ್ಲಿ ಇಲ್ಲಿ ಹಿಂದೂ ಸಾಮ್ರಾಜ್ಯವಿತ್ತು ಎಂಬುದಕ್ಕೆ ಈ ದೇವಾಲಯ ಪ್ರತ್ಯಕ್ಷ ಸಾಕ್ಷಿ.

        12ನೇ ಶತಮಾನದ ಪೂರ್ವಾರ್ಧದಲ್ಲಿ (ಅಂದರೆ, 1113-1150ರಲ್ಲಿ) ಖಮೇರ್ ವಂಶದ ರಾಜ 2ನೇ ಸೂರ್ಯವರ್ಮನ್ ಈ ಭವ್ಯ ದೇಗುಲವನ್ನು ನಿರ್ಮಿಸಿದ. ಅಂದಿನ ಕಾಲದಲ್ಲಿ ಖಮೇರ್ ಸಾಮ್ರಾಜ್ಯ, ಏಷ್ಯಾದ್ಯಂತ ತನ್ನ ಪ್ರಾಬಲ್ಯವನ್ನು ಮೆರೆದಿತ್ತು. ಅಂದಿನ ಖಮೇರ್ ರಾಜವಂಶಸ್ಥರಿಗೂ, ದಕ್ಷಿಣ ಭಾರತದ ಚೋಳರಿಗೂ ನಿಕಟ ಬಾಂಧವ್ಯವಿತ್ತು. ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಾಪುರದಲ್ಲಿ ಈ ದೇವಾಲಯ ನಿರ್ಮಾಣವಾಯಿತು. ಆರಂಭದಲ್ಲಿ ಇದು ಹಿಂದೂಗಳ ಆರಾಧ್ಯ ದೈವ ವಿಷ್ಣುವಿನ ದೇಗುಲವಾಗಿತ್ತು. ವಾಸ್ತವವಾಗಿ ಖಮೇರ್ ರಾಜವಂಶಸ್ಥರು ಶೈವ ಪಂಥದ ಅನುಯಾಯಿಗಳು. ಅಂದರೆ, ಶಿವನ ಭಕ್ತರಾಗಿದ್ದರು. ಆದರೆ, ಎರಡನೇ ಸೂರ್ಯವರ್ಮನ್ ಈ ದೇವಾಲಯವನ್ನು ವಿಷ್ಣುವಿಗೆ ಸಮರ್ಪಿಸಿದ. ಆರಂಭದಲ್ಲಿ ಈ ದೇವಾಲಯವನ್ನು "ವರ ವಿಷ್ಣುಲೋಕ್' ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ಇಲ್ಲಿ ವಿಷ್ಣುವಿನ ಜತೆ ಮಹೇಶ್ವರ ಮತ್ತು ಬ್ರಹ್ಮನಿಗೂ ಪೂಜೆ ನಡೆಯುತ್ತಿತ್ತು.

        ಆದರೆ, 12ನೇ ಶತಮಾನದ ಅಂತ್ಯದಲ್ಲಿ ಇದನ್ನು ಬೌದ್ಧ ದೇವಾಲಯವನ್ನಾಗಿ ಪರಿವರ್ತಿಸಲಾಯಿತು. ಅಲ್ಲದೆ, ಯಶೋಧರಾಪುರದ ಹೆಸರು ಅಂಕೂರ್ ವಾಟ್ ಎಂದಾಯಿತು. ಸಂಸ್ಕøತದಲ್ಲಿ ಅಂಕೂರ್‍ವಾಟ್ ಎಂದರೆ ದೇವಾಲಯಗಳ ನಗರ ಎಂದರ್ಥ. ಆದಾಗ್ಯೂ, ಇಲ್ಲಿ ಹಿಂದೂ ಮತ್ತು ಬೌದ್ಧ ಧರ್ಮದ ಅನುಯಾಯಿಗಳು ಈ ದೇವಾಲಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೀಗ ವಿಷ್ಣುವಿಗಿಲ್ಲಿ ನಿತ್ಯ ಪೂಜೆ ನಡೆಯುತ್ತಿಲ್ಲ.

ರಾಷ್ಟ್ರಧ್ವಜದ ಲಾಂಛನ:


        ಅಂಕೂರ್‍ವಾಟ್, ಕಾಂಬೋಡಿಯಾದ ಹೆಮ್ಮೆ, ಪ್ರತಿಷ್ಠೆಯ ಸಂಕೇತ. ಹಾಗಾಗಿಯೇ, ಆ ದೇಶ ಈ ದೇವಾಲಯದ ಫೋಟೋವನ್ನು ತನ್ನ ರಾಷ್ಟ್ರಧ್ವಜದಲ್ಲಿ ಲಾಂಛನವನ್ನಾಗಿ ಬಳಸುತ್ತಿದೆ. ಪ್ರತಿವರ್ಷ ಸುಮಾರು 2 ಮಿಲಿಯನ್ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 1992ರಲ್ಲಿ ಯುನೆಸ್ಕೋ ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಈ ದೇವಾಲಯವನ್ನು ಸೇರಿಸಿದೆ.

402 ಎಕರೆಯಷ್ಟು ವಿಶಾಲವ್ಯಾಪ್ತಿಯಲ್ಲಿದೆ:

        ಬರೋಬ್ಬರಿ 402 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. 5 ಕಿ.ಮೀ. ಉದ್ದ ಹಾಗೂ 3 ಕಿ.ಮೀ. ಅಗಲದ ಪ್ರಾಂಗಣವನ್ನು ದೇವಾಲಯ ಹೊಂದಿದೆ. ಅಚ್ಚಹಸಿರಿನ ಅರಣ್ಯದ ನಡುವೆ, ಮೇರು ಪರ್ವತದ ಆಕೃತಿಯಲ್ಲಿ, ವಿಶಿಷ್ಟ ಶೈಲಿಯ ಖಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಈ ದೇಗುಲವನ್ನು ನಿರ್ಮಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಮೇರು ಪರ್ವತವೆಂದರೆ, ಅದು ದೇವಾನುದೇವತೆಗಳ ವಾಸಸ್ಥಾನ.

        ದೇಗುಲದ ಮುಖ್ಯ ಗೋಪುರದ ಸುತ್ತ ನಾಲ್ಕು ಉಪಗೋಪುರಗಳಿವೆ. ಮುಖ್ಯ ದೇವಾಲಯದ ಸುತ್ತ 1024 ಮೀಟರ್ ಉದ್ದ, 802 ಮೀಟರ್ ಅಗಲ, 4.5 ಮೀಟರ್ ಎತ್ತರದ ಗೋಡೆಯಿದೆ. ದೇವಾಲಯದ ಸುತ್ತ 30 ಮೀಟರ್‍ಗಳಷ್ಟು ವಿಶಾಲವಾದ ಜಾಗವಿದೆ. ಹಾಗೆಯೇ, ದೇವಾಲಯದ ಸುತ್ತ 190 ಮೀಟರ್ ಆಳದ ನೀರಿನ ಕಂದಕವಿದೆ. ಮೂರು ಪದರಗಳಲ್ಲಿ ಇದರ ತಳಪಾಯವಿದೆ. ಮೊದಲು ಮರಳು, ನಂತರ ಜಲ್ಲಿಕಲ್ಲು, ಅದರ ಮೇಲೆ ಮಣ್ಣು ಹಾಕಿ ತಳಪಾಯವನ್ನು ಗಟ್ಟಿ ಮಾಡಲಾಗಿದೆ. ಈ ಭವ್ಯ ದೇಗುಲ ನಿರ್ಮಿಸಲು ಬರೋಬ್ಬರಿ 37 ವರ್ಷಗಳೇ ಬೇಕಾಯಿತು. ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈ ದೇಗುಲ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತು. 

      


 
ಈ ದೇವಾಲಯದ ಇನ್ನೊಂದು ವಿಶೇಷವೆಂದರೆ, ಈ ದೇವಾಲಯದ ಮುಖ್ಯದ್ವಾರ ಪಶ್ಚಿಮಕ್ಕೆ ಅಭಿಮುಖವಾಗಿರುವುದು. ಪ್ರತಿನಿತ್ಯದ ಸೂಯಾಸ್ತವು ಈ ದೇವಾಲಯದ ಗರ್ಭಗುಡಿಯ ನಟ್ಟನಡುವೆ ಸಂಭವಿಸುತ್ತದೆ. ಹೀಗಾಗಿ, ಸಂಜೆ, ಸೂರ್ಯನ ತಿಳಿ ಬಿಸಿಲಿನ ರಶ್ಮಿಗಳಿಂದ ದೇವಾಲಯ ಕಂಗೊಳಿಸುವ ಮೂಲಕ, ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಸೂರ್ಯ, ಇಲ್ಲಿನ ದೇವರಿಗೆ ತಲೆಬಾಗುವಂತೆ ಕಾಣಿಸುವ ನಯನ ಮನೋಹರ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತದೆ. 

        ಮಹಾಭಾರತದಲ್ಲಿ ಬರುವ 56 ದೇಶ ಅಥವಾ ಪ್ರಾಂತ್ಯಗಳ ಪೈಕಿ ಕಾಂಬೋಡಿಯಾ ಕೂಡ ಒಂದಾಗಿತ್ತು ಎಂಬುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದು ಬಂದಿದೆ. ಇದೀಗ ಈ ದೇವಾಲಯ ಬೌದ್ಧ ಭಿಕ್ಷುಗಳ ಪ್ರಾರ್ಥನಾ ಮಂದಿರವಾಗಿದ್ದರೂ, ಇಲ್ಲಿರುವ ಹಲವು ವಿಗ್ರಹಗಳು ಹಾಗೂ ಇಲ್ಲಿನ ಗೋಡೆಗಳ ಮೇಲಿನ ಕೆತ್ತನೆಗಳು, ಹಿಂದೂ ಮೂರ್ತಿಗಳನ್ನು ಹಾಗೂ ಪುರಾಣಗಳನ್ನು ಬಿಂಬಿಸುತ್ತವೆ. 

ಗುಪ್ತನಿಧಿ ಇದೆಯೇ?

        ಖಮೇರ್ ರಾಜವಂಶಸ್ಥರ ವೈಭವ, ಸಿರಿವಂತಿಕೆಗೆ ಈ ದೇಗುಲ ಪ್ರತ್ಯಕ್ಷ ಸಾಕ್ಷಿಯಾಗಿತ್ತು. ಸುಮಾರು 3 ಸಾವಿರಕ್ಕೂ ಅಧಿಕ ವರ್ಷಗಳ ಕಾಲ ತನ್ನ ಸೊಬಗಿನಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿತ್ತು. ಆದರೆ, 15ನೇ ಶತಮಾನದಲ್ಲಿ ಖಮೇರ್ ವಂಶದ ಪತನದ ನಂತರ ಈ ದೇಗುಲದ ವೈಭವದ ದಿನಗಳು ಮರೆಯಾಗುತ್ತಾ ಬಂದವು. ಬೌದ್ಧ ಧರ್ಮದ ಪ್ರಭಾವವೂ ಇಲ್ಲಿ ಹೆಚ್ಚಾಯಿತು. ನಂತರದ ದಿನಗಳಲ್ಲಿ ಈ ದೇಗುಲದ ಮೇಲೆ ದಾಳಿಗಳೂ ನಡೆದವು. ಸುತ್ತಲೂ ಮರಗಳು ಬೆಳೆದು, ದಟ್ಟ ಕಾನನದ ನಡುವೆ ದೇಗುಲ ಮರೆಯಾಗಿ ಹೋಗಿತ್ತು. 


        ಬಳಿಕ, 19ನೇ ಶತಮಾನದ ಅಂತ್ಯದಲ್ಲಿ ಈ ದೇಗುಲ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬಂತು. ಈ ದೇವಾಲಯದ ಜೀಣೋದ್ಧಾರ ಕಾರ್ಯ ಕೈಗೊಂಡ ಅಲ್ಲಿನ ಸರ್ಕಾರ, ಇದನ್ನು ಐತಿಹಾಸಿಕ ತಾಣವನ್ನಾಗಿ ಪರಿವರ್ತಿಸಿತು. ಖಮೇರ್ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಸಿರಿ, ಸಂಪತ್ತನ್ನು ಈ ದೇಗುಲದ ಬಳಿ ಗುಪ್ತನಿಧಿಯಾಗಿ ಇರಿಸಲಾಗಿದೆ ಎಂಬ ಅನುಮಾನಗಳಿವೆ. ಆದರೆ, ದೇಗುಲಕ್ಕೆ ಹಾನಿಯಾಗಬಹುದು ಎಂಬ ಕಾರಣದಿಂದ ಅಲ್ಲಿನ ಸರ್ಕಾರ ಈ ನಿಧಿಯ ಶೋಧಕ್ಕೆ ಮುಂದಾಗಿಲ್ಲ.


https://www.youtube.com/watch?v=dcslEL-P9qQ




ಬುಧವಾರ, ಮಾರ್ಚ್ 3, 2021

"ಮದು'ಮಯ ಜೀವನ

      

        ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಸುಮಂತನಿಗೆ ಜೀವನ ನಡೆಸುವುದಕ್ಕೇನೂ ತೊಂದರೆ ಇರಲಿಲ್ಲ. ಹಿಂದಿಲ್ಲ, ಮುಂದಿಲ್ಲ, ತಂದೆ, ತಾಯಿಗೆ ಒಬ್ಬನೇ ಮಗ. ಮನೆಯಲ್ಲಿ ಪಿತ್ರಾರ್ಜಿತವಾಗಿಯೇ ಬಂದ ಸಾಕಷ್ಟು ಆಸ್ತಿ ಇತ್ತು. ಎರಡೂವರೆ ಎಕರೆ ಅಡಿಕೆ ತೋಟ, ಎರಡು ಎಕರೆ ಗದ್ದೆ, ಅರ್ಧ ಎಕರೆಯಷ್ಟು ವ್ಯಾಪ್ತಿಯಲ್ಲಿ ಹರಡಿದ ತೆಂಗಿನ ಪ್ಲಾಟ್ ಆದಾಯಕ್ಕೆ ಬರಪೂರ ಕಾಣಿಕೆ ನೀಡುತ್ತಿದ್ದವು. ಮಲೆನಾಡಿನ, ಅಚ್ಚಹಸಿರಿನ ಹಸಿರು ತೋಪುಗಳ ನಡುವೆ ಬೀಡು ಬೀಸಾಗಿ ಕಟ್ಟಲಾದ, ವಿಶಾಲವಾದ 2 ಹಜಾರದ ಹೆಂಚಿನ ಮನೆಯದು. ಮನೆಯಲ್ಲಿ ಎಲ್ಲವೂ ಅಚ್ಚುಕಟ್ಟು, ಆಧುನಿಕ ಜೀವನ ಶೈಲಿಗೆ ಹೊಂದಿಕೆಯಾಗುವ ಎಲ್ಲಾ ಅನುಕೂಲತೆಗಳೂ ಮನೆಯಲ್ಲಿದ್ದವು. ಓಡಾಡಲು ಕಾರು, ಬೈಕ್, ಫ್ರಿಜ್, ವಾಷಿಂಗ್ ಮಷಿನ್, ಟಿವಿ, ಮೊಬೈಲ್ ನೆಟ್‍ವರ್ಕ್ ಸಂಪರ್ಕ... ಸೇರಿದಂತೆ ಯಾವ ಅನುಕೂಲಕ್ಕೂ ಕೊರತೆ ಇರಲಿಲ್ಲ. ಹಾಲು, ಮೊಸರು, ತರಕಾರಿ, ಹಣ್ಣು ಸೇರಿದಂತೆ ದಿನನಿತ್ಯ ಬೂರಿ ಭೋಜನದ ವ್ಯವಸ್ಥೆಯೇ ಇರುತ್ತಿತ್ತು.


        ಬಿ.ಕಾಂ ಪದವಿ ಮುಗಿಸಿ, ಎಂಬಿಎ ಮಾಡಿದ್ದ ಸುಮಂತ, ಬೆಂಗಳೂರಿನಲ್ಲಿ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಎರಡ್ಮೂರು ವರ್ಷ ನೌಕರಿ ಮಾಡಿದ್ದ. "ಸುಮಂತ, ಈ ನೌಕರಿ, ಆ ಬೆಂಗಳೂರಿನ ಜಂಜಾಟ...ಇದೆಲ್ಲಾ ನಿಂಗೆ ಯಾಕಪ್ಪ. ಮನೇಲಿ ಬೇಕಾದಷ್ಟು ಆಸ್ತಿ ಇದ್ದು. ಸಂಬಳಕ್ಕಾಗಿ ಯಾವುದೋ ಕಂಪನಿಯಲ್ಲಿ, ಅದ್ಯಾವನೋ ಕೈಕೆಳಗೆ, ಬೇರೆ ಯಾರಿಗೋಸ್ಕರನೋ ದುಡಿದ ಬದಲು, ನಿನ್ನದೇ ಮನೇಲಿ, ನೀನೇ ಯಜಮಾನನಾಗಿ ದುಡಿದು ತಿನ್ನದು ಒಳ್ಳೆದಲ್ದನ' ಎಂದು ತಂದೆ ಹೇಳಿದಾಗ, ಸುಮಂತನಿಗೂ ಹೌದು ಅನ್ನಿಸ್ತು. ಮನುಷ್ಯ, ತಾನು ಮನುಷ್ಯ ಎನ್ನುವುದನ್ನೇ ಮರೆತು, ಹಣವೇ ಬದುಕು, ಆಫೀಸೇ ಜಗತ್ತು, ಈ ದೇಹವೆಂಬುದು ಆ ದೇವ ನಿರ್ಮಿಸಿದ ಯಂತ್ರ ಎಂದುಕೊಂಡೇ ಬೆಂಗಳೂರಲ್ಲಿ ಕೆಲಸ ಮಾಡುತ್ತಾ, ಯಾಂತ್ರಿಕವಾಗಿ ಬದುಕುವುದಕ್ಕಿಂತ ಹಳ್ಳಿಯ ಸುಖಜೀವನವೇ ಲೇಸು ಎನ್ನುತ್ತಾ ಮನೆಯ ಹಾದಿ ತುಳಿದಿದ್ದ. ರಾಜನಂತೆ ಜೀವನ ಸಾಗಿಸುತ್ತಿದ್ದ.


ಸುಮಂತನಿಗೆ 26 ವರ್ಷ ತುಂಬುತ್ತಿದ್ದಂತೆ, ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕತೊಡಗಿದ ಸುಮಂತನ ತಂದೆ ಗಣಪಯ್ಯ. ಸುಮಂತನಿಗೆ ಮನಸ್ಸಲ್ಲಿ ಅದೇನೋ ಪುಳಕ. ಇಷ್ಟು ದಿವಸ ಒಬ್ಬಂಟಿಯಾಗಿ, ಹಾಯಾಗಿ, ಮನಸ್ಸಿಗೆ ಬಂದಂತೆ ತಿರುಗಾಡಿಕೊಂಡು ಇರುತ್ತಿದ್ದ ತನ್ನ ಬಾಳಿಗೆ, ಹೆಣ್ಣೊಬ್ಬಳು ಬರುತ್ತಿದ್ದಾಳೆ ಎಂಬ ಯೋಚನೆಯೇ ಆಹ್ಲಾದದ ಅನುಭವ ನೀಡುತ್ತಿತ್ತು. ಬಾಳಸಂಗಾತಿಯ ಬಗ್ಗೆ ತನ್ನದೇ ಆದ ಕನಸನ್ನು ಕಾಣುತ್ತಾ ದಿನದೂಡತೊಡಗಿದ.

ದಿನಗಳು ಉರುಳತೊಡಗಿದವು. ಋತುಗಳು ಜಾರತೊಡಗಿದವು. ವರುಷಗಳು ಕಳೆದು ಹೋದವು. ಆದರೆ, ಸುಮಂತನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಯಾರನ್ನು ಕೇಳಿದ್ರು, "ಎಮ್ಮನೆ ಕೂಸಿಗೆ ಮಾರಾಯಾ, ಮನೇಲಿ, ಕೃಷಿ ಮಾಡಿಕೊಂಡು ಇಪ್ಪ ಮಾಣಿ ಬ್ಯಾಡ್ದಡ. ತನ್ಗೆ ಬೆಂಗ್ಳೂರಲ್ಲಿ ನೌಕರಿ ಇದ್ದವ್ನೆ ಬೇಕು' ಹೇಳ್ತು. "ನಾವೂ ತೀರಾ ಒತ್ತಾಯ ಮಾಡಲೆ ಆಗ್ತನ. ಮತೆ, ಎಮ್ಮನೆ ಕೂಸು ಹೇಳದ್ರಲ್ಲೂ ಕರೆಕ್ಟ್ ಇದ್ದಾ. ಈ ಜಮೀನು ನಂಬ್ಕಂಡು, ಈಗಿನ ಕಾಲ್ದಲ್ಲಿ ಜೀವ್ನ ಮಾಡಲೆ ಆಗ್ತನ. ಆಳ್ಗ ಸಿಗ್ತ್ವಿಲ್ಲೆ. ನಮ್ಮತ್ರ ಕೆಲ್ಸ ಮಾಡಲೆ ಆಗ್ತಿಲ್ಲೆ. ಒಟ್ನಲ್ಲಿ ನಾವು ಇಪ್ಪಷ್ಟು ದಿವ್ಸ ನೋಡ್ಕಂಡು ಹೋಪ್ದು. ಕೊನೆಗೆ ಒಂದಿವ್ಸ ಜಮೀನು ಕೊಟ್ಟಿಕ್ಕೆ ನಾವೂ ಬೆಂಗ್ಳೂರು ಬಸ್ಸ ಹತ್ತದೆಯಾ. ಮತ್ಯಂತ ಮಾಡಲೂ ಬರ್ತಿಲ್ಲೆ' ಎನ್ನುವ ಉದ್ಘಾರವೇ ಹೆಣ್ಣುಮಕ್ಕಳ ತಂದೆ-ತಾಯಿ ಬಾಯಲ್ಲಿ ಬರ್ತಿತ್ತು.

        ಸುಮಂತನಿಗೂ ನೋಡಿ, ನೋಡಿ ಬೇಸರವಾಗ್ತಾ ಬಂತು. ನೌಕರಿ ಮಾಡುತ್ತಿರುವ ತನ್ನ ವರಗೆಯ ಯುವಕರಿಗೆ ಅದಾಗಲೇ ಮದುವೆಯಾಗಿ ಮಕ್ಕಳಾದರೂ, ತನಗೆ ಕಂಕಣ ಬಲ ಕೂಡಿ ಬರದ್ದಕ್ಕೆ ಮನಸ್ಸು ನೋಯುತ್ತಿತ್ತು.


        ಅದೊಂದು ದಿನ ಸುಮಂತ, ಬೆಂಗಳೂರಿನಲ್ಲಿರುವ ತನ್ನ ಗೆಳೆಯನಿಗೆ ಪತ್ರ ಬರೆದ. "ಗೆಳೆಯಾ, ನನಗೆ ಮದುವೆಯಾಗಲೇ ಬೇಕು ಅನ್ನಿಸ್ತಾ ಇದೆ. ಹಾಗಾಗಿ, ಮತ್ತೆ ಬೆಂಗಳೂರಿಗೆ ಬಂದು, ನೌಕರಿ ಮಾಡುವ ಮನಸ್ಸು ಮಾಡುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡು' ಎಂದು ಪತ್ರದಲ್ಲಿ ತಿಳಿಸಿದ. "ಏ ಅದಕ್ಕೇನಂತೆ, ಬಾ, ಗೆಳೆಯಾ, ಬೆಂಗಳೂರಲ್ಲಿ ಊರವರಿಗಿಂತ ಪರ ಊರಿನವರೇ ಹೆಚ್ಚು ಎಂಬುದು ನಿನಗೆ ಗೊತ್ತಲ್ಲ. ಇಲ್ಲಿ ಬಂದರೆ, ಬದುಕು ಕಷ್ಟವಾಗಬಹುದು. ಆದರೆ, ನೌಕರಿಯೂ ಸಿಗುತ್ತೆ, ಹೆಣ್ಣು ಮಕ್ಕಳ ಮನಸ್ಸೂ ನಿನ್ನತ್ತ ಒಲಿಯುತ್ತೆ' ಎನ್ನುತ್ತಾ ಗೆಳೆಯನನ್ನು ಆಹ್ವಾನಿಸಿದ.

        ಮರುದಿನವೇ ಸುಮಂತ ಬೆಂಗಳೂರಿನ ಬಸ್ಸು ಹತ್ತಿದ. "ಮದುವೆ ಮಾಡ್ಕಂಡು, ಮನಿಗೆ ಬತ್ನಾ ಅಪ್ಪಯ್ಯಾ' ಎನ್ನುತ್ತಾ ತಂದೆ-ತಾಯಿಗೆ ನಮಸ್ಕರಿಸಿದ. "ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಮಾತುಗಳನ್ನು ಗುನುಗುತ್ತಾ, ಬಸ್ಸಿನ ಸೀಟಿಗೆ ಒರಗಿ ನಿದ್ದೆಗೆ ಜಾರಿದ.



https://www.youtube.com/watch?v=LoPOl1v41g8







ಬುಧವಾರ, ಫೆಬ್ರವರಿ 17, 2021

ಶ್ರೀಮಂತನ ತೋಳ್ತೆಕ್ಕೆಗೆ ಜಾರಿದ ಕೃಷಿ

          


             

ಬದಲಾವಣೆ ಜಗದ ನಿಯಮ ಎನ್ನುವ ಮಾತು ಕೃಷಿ ಕ್ಷೇತ್ರಕ್ಕೂ ಈಗ ಅನ್ವಯವಾಗುತ್ತಿದೆ. ಅನ್ನದಾತನ ತವರು ಎನಿಸಿಕೊಳ್ಳುತ್ತಿದ್ದ ಕೃಷಿಕ್ಷೇತ್ರಕ್ಕೀಗ ಬಂಡವಾಳಶಾಹಿಗಳ ಆಗಮನವಾಗುತ್ತಿದೆ. ನಮ್ಮ ಈಗಿನ ಅರ್ಥವ್ಯವಸ್ಥೆಯಲ್ಲಿ ಕೈಗಾರಿಕೆ, ಸೇವೆ, ವಾಣಿಜ್ಯ, ವ್ಯಾಪಾರ ... ಹೀಗೆ ಬಹುತೇಕ ಎಲ್ಲಾ ವಲಯಗಳು ಸೋತು, ನಿಸ್ತೇಜವಾಗಿ ಮೇಲೇಳಲು ಸರ್ಕಾರದ ಸಹಾಯ, ಪ್ರೋತ್ಸಾಹ ಬೇಡುತ್ತಿರುವಾಗ ದೇಶದ ರೈತಾಪಿ ವರ್ಗ ಸಮೃದ್ಧ ಆಹಾರ, ಹಾಲು, ಹಣ್ಣು, ತರಕಾರಿಗಳನ್ನು ದೇಶಕ್ಕೆ ಒದಗಿಸುತ್ತಿದೆ. ಬಂಡವಾಳಶಾಹಿಗಳಂತೆ ಪೈಸೆ, ಪೈಸೆಗೆ ಲೆಕ್ಕಾಚಾರ ಹಾಕದೆ, ಲಾಭವನ್ನಷ್ಟೇ ನೋಡದೆ, ಸೇವಾ ಮನೋಭಾವದಿಂದ ಜನರಿಗೆ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ತಳಮುಟ್ಟಿದ ಆರ್ಥಿಕ ಪರಿಸ್ಥಿತಿಯಿಂದಾಗಿ ಖಾಸಗಿ ವಲಯದ ನೌಕರ ವರ್ಗ ಕೆಲಸ ಕಳೆದುಕೊಂಡು ಪರಿತಪಿಸುತ್ತಿರುವಾಗ ತನ್ನ ನಂಬಿದ ರೈತರ ಮಕ್ಕಳಿಗೆ ಈ ಕೃಷಿ ವಲಯ ಆಸರೆ ನೀಡಿ ಅವರನ್ನು ಸಂತೈಸುತ್ತಿದೆ. ನೆಮ್ಮದಿಯ ಬದುಕಿಗೆ ನೆಲೆ ಕಲ್ಪಿಸಿದೆ. 

ಇಷ್ಟು ದಿವಸ ಕೃಷಿ ಭೂಮಿ ರೈತರ ಪಾಲಿಗೆ ಅನ್ನ ನೀಡುವ, ಅವರ ಹಸಿವು ನೀಗಿಸುವ ತಾಯಿಯಾಗಿದ್ದಳು. ಆದರೀಗ ಈ ಭೂತಾಯಿ ಶ್ರೀಮಂತರ ತೋಳ್ತೆಕ್ಕೆಗೆ ಜಾರಿ, ಹಣ ಮಾಡುವ ತರುಣಿಯಾಗುತ್ತಿದ್ದಾಳೆ. 


ಜಾರಿಗೆ ಸುಗ್ರೀವಾಜ್ಞೆ ದಾರಿ:

ರೈತಾಪಿ ವರ್ಗದ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿದೆ. ಈ ಕಾಯಿದೆಯ ಪ್ರಮುಖ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ. ಮತ್ತೆ ಕೆಲವಕ್ಕೆ ತಿದ್ದುಪಡಿ ಮಾಡಲಾಗಿದೆ.

1. 1961ರ ಕರ್ನಾಟಕ ಭೂ ಸುಧಾರಣಾ ಕಾಯಿದೆಯ 79 ಎ ಹಾಗೂ ಬಿ ಕಲಂಗಳ ಪ್ರಕಾರ ಈವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿಭೂಮಿ ಖರೀದಿಸಲು ಅವಕಾಶವಿತ್ತು. ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯವುಳ್ಳ ಕೈಗಾರಿಕೋದ್ಯಮಿಗಳು, ಮತ್ತಿತರರು ಕೃಷಿಭೂಮಿಯನ್ನು ಕಬಳಿಸದಂತೆ ಈ ಕಾಯಿದೆ ರಕ್ಷಣೆ ಒದಗಿಸುತ್ತಿತ್ತು. 

2. ಜೊತೆಗೆ, 79ನೇ ಸಿ ಕಲಂ, ತಾವು ನೈಜ ರೈತರೆಂದು ಸರಿಯಾದ ಪ್ರಮಾಣಪತ್ರ ನೀಡದೆ ಜಮೀನನ್ನು ಕೊಂಡವರಿಗೆ ದಂಡ ವಿಧಿಸುವ ಅವಕಾಶವನ್ನು ಒದಗಿಸುತ್ತಿತ್ತು. 

3. 80ನೇ ಕಲಂ, ರೈತರಲ್ಲದವರಿಗೆ ಕೃಷಿಭೂಮಿ ಮಾರುವುದನ್ನು ನಿಷೇಧಿಸಿತ್ತು. 

4. 63ನೇ ಕಲಂ, ಐವರಿಗಿಂತ ಹೆಚ್ಚು ಜನರಿರುವ ಕುಟುಂಬ 20 ಯೂನಿಟ್‍ಗಿಂತ ಹೆಚ್ಚು ಕೃಷಿಭೂಮಿ ಹೊಂದಿರಬಾರದು ಎಂಬ ನಿಷೇಧ ವಿಧಿಸಿತ್ತು. ಅಂದರೆ, ಕರ್ನಾಟಕದಲ್ಲಿ ಕೃಷಿ ಭೂಮಿಯ ವರ್ಗೀಕರಣವನ್ನು ಆಧರಿಸಿ ಒಂದು ಕೃಷಿ ಕುಟುಂಬ 48-108 ಎಕರೆಗಿಂತ ಹೆಚ್ಚು ಭೂಮಿ ಹೊಂದಲು ಅವಕಾಶ ಇರಲಿಲ್ಲ. 

5. ಜೊತೆಗೆ, 1974ರ ಭೂ ಸುಧಾರಣಾ ಕಾಯಿದೆ, ಊಳಿಗಮಾನ್ಯ ಪದ್ಧತಿಯ ಶೋಷಣೆಯಿಂದ ಕೃಷಿಯನ್ನು ಮುಕ್ತಗೊಳಿಸಿತ್ತು.

ಆದರೀಗ, ರಾಜ್ಯ ಸರ್ಕಾರ ಈ ಎಲ್ಲಾ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಮುಕ್ತವಾಗಿರಿಸಿದೆ. "ದುಡ್ಡೆ ದೊಡ್ಡಪ್ಪ' ಎನ್ನುವ ಹಾಗೆ ಹಣದ ಕಂತೆಗಳನ್ನು ಬಿಸಾಡಿ, ಕೃಷಿಭೂಮಿಯನ್ನು ಬಾಚಿಕೊಳ್ಳಬಹುದು. 7-8 ತಿಂಗಳ ಕಾಲ ಕೃಷಿ ಮಾಡಿ, ನಂತರ ಅದನ್ನು ವಾಣಿಜ್ಯೋದ್ಯಮ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ಸಹಜವಾಗಿ, ಇದು ರಿಯಲ್ ಎಸ್ಟೇಟ್ ದಂಧೆಗೆ ಸಹಾಯ ಕಲ್ಪಿಸುತ್ತದೆ.


ಪ್ರಕರಣಗಳೆಲ್ಲಾ ರದ್ದು:

1. ರಾಜ್ಯದಲ್ಲಿ 79 ಎ ಮತ್ತು ಬಿಗೆ ಸಂಬಂಧಿಸಿದಂತೆ ಒಟ್ಟೂ 13,814 ಪ್ರಕರಣಗಳಿವೆ. ಈ ಪೈಕಿ ಸುಮಾರು 1,129 ಪ್ರಕರಣಗಳು ಹಳೆಯದಾದರೆ, 12,685 ಪ್ರಕರಣಗಳು ಹೊಸದಾಗಿ ದಾಖಲಾಗಿವೆ. 

2. ಇನ್ನು, ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೇ 17ಕ್ಕೂ ಹೆಚ್ಚು ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಜಮೀನುಗಳ ಮೌಲ್ಯವೇ ಸುಮಾರು 12-15 ಸಾವಿರ ಕೋಟಿ ರೂ.ಗಳಷ್ಟು ಇರಬಹುದು. ಈ ಎಲ್ಲಾ ಪ್ರಕರಣಗಳು ಈಗ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಈ ಕಾಯಿದೆಯ ತಿದ್ದುಪಡಿಯಿಂದಾಗಿ ಈ ಎಲ್ಲಾ ಪ್ರಕರಣಗಳು ರದ್ದಾಗಲಿವೆ.

3. ಈ ಕಾಯಿದೆಯ ತಿದ್ದುಪಡಿಯಿಂದಾಗಿ ಮುಂದಿನ ದಿನಗಳಲ್ಲಿ ಹಳ್ಳಿ, ಹಳ್ಳಿಗಳಲ್ಲಿ ಕಾರ್ಪೊರೇಟ್ ಒಡೆತನದ ಕೃಷಿ ಪದ್ಧತಿ "ಫಾರ್ಮ್ ಹೌಸ್ ಸಂಸ್ಕøತಿ' ತಲೆ ಎತ್ತಿದರೆ ಆಶ್ಚರ್ಯಪಡಬೇಕಾಗಿಲ್ಲ. "ಉಳುವವನೆ ಹೊಲದೊಡೆಯ' ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೋಗಿ "ಉಳ್ಳವನೇ ಹೊಲದೊಡೆಯ' ಆಗುತ್ತಿದ್ದಾನೆ. 

4. ಇನ್ನು ಮುಂದೆ ಕೃಷಿ ಭೂಮಿ ಸಹ ಇತರ ವಸ್ತುಗಳ ಹಾಗೆ ಸರಾಗವಾಗಿ ಮಾರುವ, ಕೊಳ್ಳುವ ಮಾರುಕಟ್ಟೆಯ ಸರಕಾಗಲಿದೆ. ಯಾವತ್ತೂ ಮೌಲ್ಯ ಕುಸಿಯದೆ, ಬಂಗಾರದಂತೆ ಸದಾ ವೃದ್ಧಿಯಾಗುವ ಅಮೂಲ್ಯ ಆಸ್ತಿಯಾಗಿ ಕಾರ್ಪೊರೇಟ್ ವಲಯಕ್ಕೆ ಈ ಭೂಮಿ ಆರ್ಥಿಕ ಸದೃಢತೆ ಕೊಡಲಿದೆ. 

5. "ಬ್ಲ್ಯಾಕ್ ಮನಿ'ಯನ್ನು ಸುಲಭವಾಗಿ "ವೈಟ್' ಮಾಡಲು ಬಂಡವಾಳದಾರರಿಗೆ ಇದು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. 

6. ಅಷ್ಟೇ ಅಲ್ಲ, ನಿಧಾನವಾಗಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಹೆಚ್ಚಾಗುವ ಸಾಧ್ಯತೆ ಇದೆ.



ಸರ್ಕಾರದ ಸಮರ್ಥನೆ:

ರಾಜ್ಯದಲ್ಲಿನ ಕೃಷಿ ಚಟುವಟಿಕೆಗಳಿಗೆ ಈ ಕಾಯಿದೆ ಉತ್ತೇಜನ ನೀಡಲಿದೆ ಎನ್ನುವುದು ಸರ್ಕಾರದ ವಾದ. ಉಳುವೆ ಮಾಡದೆ ಪಾಳು ಬಿದ್ದಿರುವ ಲಕ್ಷಾಂತರ ಎಕರೆಯಲ್ಲಿ ಕೃಷಿ ಚಟುವಟಿಕೆ ಶುರುವಾಗಲಿದೆ ಎನ್ನುತ್ತಿದೆ ಸರ್ಕಾರ.

ನಿಜ, ಕರ್ನಾಟಕ ಕೃಷಿ ಆಯೋಗ ನಡೆಸಿರುವ ಅಧ್ಯಯನದ ಪ್ರಕಾರ ರಾಜ್ಯದ ರೈತರು ಈಗಾಗಲೇ 21 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿಯನ್ನೇ ಮಾಡದೆ ಪಾಳು ಬಿಟ್ಟಿದ್ದಾರೆ. ಈ ಪೈಕಿ, ಶೇ.61ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರು. ಇವರಲ್ಲಿ ಬಹುಪಾಲು ಮಂದಿ ಪಟ್ಟಣಗಳಿಗೆ ವಲಸೆ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೂ, ಮುಂದೊಂದು ದಿನ ಕಷ್ಟದ ಸಮಯದಲ್ಲಿ ಈ ಭೂಮಿ ತಮಗೆ ಆಸರೆ ಆಗಬಹುದು ಎಂಬ ಆಶಯ ಅವರದು. ಆದರೆ, ಇವರ ಭೂಮಿ ಹಣವುಳ್ಳವರ, ಭೂ ಮಾಫಿಯಾ ಶಕ್ತಿಗಳ ಕೈವಶವಾದರೆ ಇವರೆಲ್ಲಾ ಶಾಶ್ವತವಾಗಿ ನಿರ್ಗತಿಕರಾಗುತ್ತಾರೆ ಎಂಬುದು ಮಾತ್ರ ಕಟು ವಾಸ್ತವ. 

ಅಷ್ಟೇ ಅಲ್ಲ, ಪ್ರಸ್ತುತ ರೈತರ ಬೆಳೆಗೆ ಬೆಂಬಲ ಬೆಲೆ ನೀಡುವ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸುವ, ಸಾಲದ ಶೂಲದಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ನೀಡುವುದೂ ಸೇರಿದಂತೆ ಸರ್ಕಾರದ ಹಲವು ಪ್ರೋತ್ಸಾಹಕ ಕ್ರಮಗಳು ಕಾಲಕ್ರಮೇಣ ನಿಲ್ಲಬಹುದು. ಆಗ, ಬಡ ರೈತಾಪಿ ವರ್ಗ ಮತ್ತಷ್ಟು ಬಡವಾಗುತ್ತದೆ ಎಂಬುದಂತೂ ಕಟು ಸತ್ಯ.


https://www.youtube.com/watch?v=IBUTBBZukkM&t=317s




ಹುಲಿಗೆಮ್ಮ ದೇವಿಯ ಭಕ್ತರಿಗೆ ಬಯಲೇ ಶೌಚಾಲಯ

 ಹುಣ್ಣಿಮೆಗೊಮ್ಮೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲ...